Tuesday 26 November 2013

ಬಾಲ್ಯದ ಭೂತ .. !!

ಬಾಲ್ಯದ ಭೂತ .. !!

ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ನೆನಪಾದ ಕೆಲವು ಸಣ್ಣ ಸಣ್ಣ ಘಟನೆಗಳನ್ನು ಒಂದುಗೂಡಿಸಿ ಕಥೆಯೊಂದನ್ನು ಕಟ್ಟುವ ಪ್ರಯತ್ನ.. ಈ ಕಥೆಯು ನನ್ನ ಬಾಲ್ಯದ ನೆನಪುಗಳಲ್ಲಿ ಒಂದು ವಿಶೇಷ ಪುಟವಾಗಿದೆ .. ಇದು ನಾನು ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಇದ್ದಾಗ ನಡೆದದ್ದು .. ಆ ವರ್ಷದಲ್ಲೇ ಅಲ್ಲಿ ಅನೇಕ ಬಗೆಯ ವಿಚಾರಗಳ ಹೊಸ ಪರಿಚಯ .. ಅದಕ್ಕೂ ಮೊದಲು ಐದನೇಯ ತರಗತಿಯವರೆಗೂ ಚಿತ್ರದುರ್ಗದಲ್ಲಿ ನನ್ನ ಬಾಲ್ಯದ ದಿನಗಳನ್ನು ಅನುಭವಿಸಿದ್ದೇನೆ .. ಆದರೆ ಚಿತ್ರದುರ್ಗದಲ್ಲಿ ಕಂಡಿದ್ದ , ಕಲಿಯುತ್ತಿದ್ದ ವಾತಾವರಣ , ದುರ್ಗದ ಕೋಟೆ ಹಾಗೂ ಇನ್ನೂ ಅನೇಕ ವಿಚಾರಗಳ ಪರಿಚಯ ಕಥೆಯ ನಡುವಲ್ಲಿ ಹೇಳುತ್ತೇನೆ..  ಅದಕ್ಕೂ ಮೊದಲು ಹುಬ್ಬಳ್ಳಿಯ ನೆನಪುಗಳ ಜೊತೆಯಲ್ಲಿ ಕಥೆಯನ್ನು ಆರಂಭಿಸುತ್ತಿರುವ ಉದ್ದೇಶವೇನೆಂದರೆ ಕಥೆಯ ಮುಖ್ಯ ಪಾತ್ರವೆಂದರೆ ನನ್ನ ಪಾತ್ರ .. ಜಗತ್ತಿನ ವಿಭಿನ್ನತೆಯ ವಿಚಿತ್ರವೆನ್ನಿಸುವ ವಿಚಾರಗಳ ಪರಿಚಯವಾದ ದಿನಗಳು .. ಆ ದಿನಗಳನ್ನು ನಾನು ಈಗ ನೆನೆದಾಗ ನೆನಪಿನಲ್ಲಿ ಉಳಿದದ್ದು ನೂರಕ್ಕೆ ನಾಲ್ಕಿರಬಹುದಾದರೂ ದೆವ್ವಗಳು ಭೂತಗಳು ಎನ್ನುವುದರ ಮಾನಸಿಕ ಒತ್ತಡ ಮತ್ತು ಕುತೂಹಲ ಉಂಟಾಗಿದ್ದು ಆ ವರ್ಷದಲ್ಲೇ ಅತೀ ಹೆಚ್ಚು .. ಮತ್ತು ಯಾವುದೋ ಒಂದು ಪಾತ್ರವನ್ನು ಕಲ್ಪನೆ ಮಾಡಿಕೊಂಡು ಬರೆಯುವುದಕ್ಕಿಂದ ಬಾಲ್ಯದ ನನ್ನ ಪಾತ್ರಕ್ಕೆ ಒಂದಷ್ಟು ಬಣ್ಣಗಳ ಹಚ್ಚಿಟ್ಟು ಓದುಗರ ಕುತೂಹಲ ಮತ್ತು ಅವರ ಬಾಲ್ಯದ ನೆನಪುಗಳಲ್ಲಿ ನನ್ನನ್ನು ಹುಡುಕುವ ಪುಟ್ಟದಾದ ಪ್ರಯತ್ನ.. ಇಲ್ಲಿ ಘಟನೆಗಳ ಸಮಯ, ವಸ್ತು, ಸ್ಥಳ ಹಾಗೂ ವ್ಯಕ್ತಿಗಳ ಪರಿಚಯದಲ್ಲಿ ಒಂದಷ್ಟು ಅದಲು ಬದಲಾಗುವ ಸಾಧ್ಯತೆಗಳು ಇವೆ .. ಕಾರಣ ಆ ದಿನಗಳ ಸಂಪೂರ್ಣ ನೆನಪುಗಳು ಇಲ್ಲದಿರುವುದು .. ಹಾಗಾಗಿ ಇಲ್ಲಿ ಪಾತ್ರಗಳ ಹೆಸರುಗಳು ಮಾತ್ರ ಕಾಲ್ಪನಿಕವಷ್ಟೇ .. ಘಟನೆಗಳು ಎಲ್ಲವೂ ಬಾಲ್ಯದ ಅನುಭವಗಳು ಎನ್ನುವುದಂತೂ  ಸತ್ಯ .. !!

ಕಥೆಯನ್ನು ಪ್ರಾರಂಭಿಸುತ್ತ , ಬಾಲ್ಯದ ಆಟಗಲ್ಲಿ ಅನುಭವಿಸಿದ ವಿಚಿತ್ರ ಕ್ಷಣಗಳ ನೆನಪುಗಳು .. ದೆವ್ವ ಭೂತಗಳ ಬಗೆಗಿನ ಕೆಲವು ಅನುಮಾನಾಸ್ಪದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಹುಡುಕುವ ಯತ್ನದಲ್ಲಿ ಬದಲಾದ ಬದುಕಿನ ಆಲೋಚನೆಗಳು .. >>>>>>>>> visit blog.. !!

>>>>> ಕಥೆ ಕವನ ನಗೆಹನಿ ಹಾಡುಗಳು: ಬಾಲ್ಯದ ಭೂತ .. !!

Saturday 2 February 2013

ಅಪರಿಚಿತ ಅವನ್ಯಾರೋ ?


      

     ದೂರದಲ್ಲಿ ಓಡುತ್ತಿದ್ದ ವ್ಯಕ್ತಿಯನ್ನು ಕಂಡು, ಅವನು ಕಳ್ಳನಿರಬಹುದು ಎಂದುಕೊಂಡು, ಹಿಡಿಯಲು ಹಿಂದೆ ಓಡಿದ ನಾಲ್ಕು ಜನ ಸ್ವಲ್ಪ ದೂರ ಓಡಿ, ಸುಸ್ತಾಗಿ ಅಲ್ಲಿಯೇ ಹತ್ತಿರವಿದ್ದ ಮರದ ಕೆಳಗೆ ಹೋಗಿ ನಿಂತರು .. 
ಅದರಲ್ಲಿ ಒಬ್ಬ ಹೇಳಿದ, ಅವನು ಕಳ್ಳನೇ ಇರಬಹುದು, ಅದಕ್ಕೇ ಅವನು ಜೋರಾಗಿ ಓಡಿದ್ದು ಎಂದು....
ಇನ್ನೊಬ್ಬ ಹೇಳಿದ, ಅವನು ಕಳ್ಳ ಅಲ್ಲಾ ಅನಿಸುತ್ತದೆ. ಅವನ ಕೈಗಳಲ್ಲಿ ಏನೂ ಇರಲಿಲ್ಲ. ನನಗನ್ನಿಸಿದಂತೆ ಅವನು ಮತ್ತೊಬ್ಬ ಕಳ್ಳನನ್ನು ಹಿಡಿಯಲು ಜೋರಾಗಿ ಓಡುತ್ತಿರಬಹುದು..
ನಂತರ ಮೂರನೇಯ ವ್ಯಕ್ತಿ ಹೇಳಿದ, ಅವನು ಕಳ್ಳನೂ ಅಲ್ಲ , ಕಳ್ಳನನ್ನು ಹಿಡಿಯಲು ಓಡುತ್ತಿರುವವನೂ ಅಲ್ಲ.. ಅವನು ಪ್ರತೀ ದಿನ ಬೆಳಗ್ಗೆ ಜಾಗಿಂಗ್ ಮಾಡುತ್ತಾನೆ ಅಷ್ಟೇ ..
ಆಗ ತಕ್ಷಣ ನಾಲ್ಕನೇ ವ್ಯಕ್ತಿ ಅಲ್ಲಾ ನೀವೆಲ್ಲಾ ಯಾರ ಬಗ್ಗೆ ಮಾತಾಡ್ತಾ ಇದ್ದೀರಾ ... ಅಲ್ಲಿ ಯಾರು ಓಡಿ  ಹೋಗಿಲ್ಲಾ, ನೀವು ಮೂವರು ಯಾಕೆ ಓಡಿ ಬಂದದ್ದು ಅಂತಾ ನಾ ನಿಮ್ಮ ಹಿಂದೆ ಓಡೋಡಿ ಬಂದೆ... ಏನಾಗಿದೆ ನಿಮಗೆಲ್ಲಾ ?
ಅಲ್ಲಿ ಯಾರೂ ಇಲ್ಲಾ.. !! 
ನನಗನ್ನಿಸುತ್ತೆ ನೀವು ಬೆಳಗ್ಗೆ ಬೆಳಗ್ಗೆನೇ ಕುಡಿದಿರಬಹುದು ಅಂತಾ ಕಾಣುತ್ತೆ..
ಮೊದಲನೇ ವ್ಯಕ್ತಿ, ಇಲ್ಲಾ ಇಲ್ಲಾ ನಾವ್ಯಾರು ಕುಡಿದಿಲ್ಲಾ & ಅಲ್ಲಿ ಒಬ್ಬ ಓಡಿ ಹೋಗಿದ್ದು ನಿಜ .. ನೀ ಇನ್ನೂ ಸ್ವಲ್ಪ ಬೇಗ ಬಂದಿದ್ರೆ ಗೊತ್ತಾಗಿರೋದು ..
ಆಗ ನಾಲ್ಕನೇಯ ವ್ಯಕ್ತಿ, ಓ ಹಾಗಾ ಸರಿ ಸರಿ.. ಅದರೂ ನನಗ್ಯಾಕೋ ನಂಬೋಕ್ಕೆ ಆಗ್ತಿಲ್ಲಾ ಅಲ್ಲಿ ಯಾರೋ ಓಡಿ ಹೋಗಿದ್ದಾರೆ ಅನ್ನೋದು .. & ನೀವು ಕುಡಿದಿರಲೇಬೇಕು ಅಥವಾ ಅದು  ಇಲ್ಲಾಂದ್ರೆ ನೀವು ಯಾವುದೋ ದೆವ್ವ ನೋಡಿರಬೇಕು.. ಆ ದೆವ್ವ ನಿಮ್ಮ ಮೂವರಿಗೂ ಕಂಡಿದೆ ಅಂದ್ರೆ, ಆ ದೆವ್ವಕ್ಕೂ & ನಿಮ್ಮ ಮೂವರಿಗೂ ಏನೋ ಸಂಬಂಧ ಇರಲೇಬೇಕು.. ನೀವು ಮೂರು ಜನ ಸ್ವಲ್ಪ ನಿಮ್ಮ ನಿಮ್ಮ ಹಳೇ ಲೈಫ್ ನೆನಪು ಮಾಡ್ಕೊಳ್ಳಿ ಏನಾಗಿತ್ತು & ನೀವೆಲ್ಲಾ ಯಾರು, ನಿಮಗ್ಯಾರಾದ್ರೂ ಶತ್ರುಗಳು ಇದ್ರಾ, ಅಥವಾ ನೀವು ಗೊತ್ತಿದ್ದೋ , ಗೊತ್ತಿಲ್ಲದೆಯೋ ಯಾರಿಗಾದ್ರೂ ತೊಂದರೆ ಕೊಟ್ಟಿದ್ದು, ಮೋಸ ಮಾಡಿದ್ದು, ತಿಳಿದು ತಿಳಿದು ಕೂಡ ತಪ್ಪು ಮಾಡಿದ್ದು, ಇಲ್ಲಾಂದ್ರೆ ಯಾರನಾದ್ರೂ ಕೊಲೆ ಮಾಡಿದ್ರಾ .. ?

(ಇದುವರೆಗಿನದು ಕಥೆಯ ಆರಂಭ.. & ಇನ್ನು ಮುಂದಿನ ಕಥೆಯು ಸಂಭಾಷಣೆಗಳು ಮತ್ತು ಸನ್ನಿವೇಶಗಳ ಮೂಲಕ ಪಾತ್ರಗಳ ಪರಿಚಯದ ಜೊತೆಯಲ್ಲಿ ಮೂಡಿ ಬರುತ್ತದೆ.. ದಯವಿಟ್ಟು ಕಾದು ನೋಡಿ (ಓದಿ) .....)
ಮುಂದುವರೆದ ಭಾಗ : ಇಂದು ರಾತ್ರಿ ೧೧:೧೧ ಕ್ಕೆ .. :)

|| ಪ್ರಶಾಂತ್ ಖಟಾವಕರ್ ||

(ಕಥೆಯ ಸ್ಫೂರ್ತಿ : ನಾಲ್ಕು ಜನ ನೋಡಿದ್ರೆ ಏನ್ ಅಂತಾರೆ ..)

& ಮತ್ತೊಂದು ವಿಚಾರ ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು, ವಸ್ತು ವಿಚಾರ ಹಾಗೂ  ಸ್ಥಳಗಳೆಲ್ಲವೂ ಕೇವಲ ಕಾಲ್ಪನಿಕ ಮಾತ್ರ .. !!

Friday 18 January 2013

ಕಥೆಯಲ್ಲಿನ ಸಂಭಾಷಣೆಯ ಒಂದು ತುಣುಕು .. :)



ಕಥೆಯಲ್ಲಿನ ಸಂಭಾಷಣೆಯ ಒಂದು ತುಣುಕು 
****************************************
(ನಾಯಕ ಮತ್ತು ಅವನ ಗೆಳಯನ ನಡುವೆ ಒಂದು ಮಾತುಕತೆ)

ನಾಯಕನ ಗೆಳಯ :- (ನಾಯಕನಿಗೆ ಸಮಾಧಾನದ ಮಾತು)
------------------------------------------------------------------
ಸರಿ ಇರೋವರೆಗೂ ..
ಎಲ್ಲಾ ಸೈಲೆಂಟ್ ಇರ್ತಾರೆ ..
ತಪ್ಪು ಆಯ್ತು ಅಂದ್ರೆ ಸಾಕು
ಯಾಕ್ ಆಯ್ತು ಯೋಚನೆ ಮಾಡೋಲ್ಲ 
ಎಲ್ಲಾ ಜನ ಸಿಕ್ಕಾಪಟ್ಟೆ ವೈಲೆಂಟ್ ಆಗ್ತಾರೆ .. 
ಈ ಜಗತ್ತೇ ಹೀಗೆ .. 
ಆ ಜನಗಳೇ ಹಾಗೆ..
ನೀನ್ ಯಾವುದಕ್ಕೂ ಯೋಚನೆ ಮಾಡಬೇಡ ..
.
.
ನಾಯಕ :- (ನಾಯಕನ ಬೇಸರ ಮಾತುಗಳು)
-------------------------------------------------------
ಅಯ್ಯೋ .. ನಿನಗೇನ್ ಗೊತ್ತೋ 
ಸುಮ್ನಿದ್ರೆ ಜನ ನಮ್ನ ಹೇಡಿ ಅಂತಾರೆ 
ಎದುರು ಮಾತಾಡಿದ್ರೆ ರೌಡಿ ಅಂತಾರೆ 
ನಾಲ್ಕ್ ದಿನ ಸುಮ್ನಿರೋಣ ಅಂತಾ 
ನಾನು ಸುಮ್ನಿದ್ರೆ 
ಶುರು ಮಾಡೇ ಬಿಟ್ಟಿದ್ದಾರೆ ..
ನಂಗೆ ಹೊಸ ಹೊಸ ಹೆಸರಿಡೋದನ್ನ 
ವಿಚಿತ್ರ ಬೈಗುಳಗಳ ಬಿರುದು ಕೊಡೋದನ್ನ 
ನಾವ್ ಏನ್ ಕೇಡು ಮಾಡಿದ್ವೋ ಈ ಜನಗಳಿಗೆ 
ಸುಮ್ಮನಿರೋದು ತಪ್ಪು ಅಂತಾರೆ 
ನ್ಯಾಯವಾಗಿ ದುಡ್ದು ನಾಲ್ಕ್ ಕಾಸ್ ಕೂಡಿಸಿಟ್ರೇ 
ಏನೋ ಮಾಡ್ಬಾರದನ್ನೇ ಮಾಡಿದ್ದಾನೆ ಅಂತಾರೆ ..
ಯಾಕೋ ಗೆಳಯಾ ಹಿಂಗಿದೆ ಈ ಲೋಕ ..
ಕೆಲವೊಮ್ಮೆ ಅನ್ಸುತ್ತೆ ಕಣೋ ..
ಈ ಕೆಟ್ಟ ಬದುಕು ನಮ್ಗೆ ಬೇಕಾ .. ?

|| ಪ್ರಶಾಂತ್ ಖಟಾವಕರ್ ||

Tuesday 1 January 2013

ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ


ಸ್ನೇಹ ಪ್ರೀತಿ .. ಸುಮ್ಮನೇ ಒಂದು ಸ್ಟೋರಿ
***************************************

ಭಾಸ್ಕರ್ :  ಪ್ರಶಾಂತ್ ಹೊಸ ವರ್ಷದ ಶುಭಾಶಯಗಳು

ಪ್ರಶಾಂತ್  : ಧನ್ಯವಾದಗಳು ಭಾಸ್ಕರ್ & ನಿನಗೂ ಮತ್ತು ನಿಮ್ಮ ಮನೆಯವರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು

ಭಾಸ್ಕರ್  : ಮತ್ತೇನು ಹೊಸ ವರ್ಷದ ಸ್ಪೆಷಲ್ .. ಯಾವಾಗ ನಿನ್ ಮ್ಯಾರೇಜ್ ಪ್ರಶಾಂತ್ ..

ಪ್ರಶಾಂತ್  : ಇನ್ನೂ ಒಂದು ವರ್ಷ ಆಗಬಹುದು .. ಈಗ ಅದೇ ವಿಚಾರ ಮಾತುಕಥೆ ಮನೆಯಲ್ಲಿ ...

ಭಾಸ್ಕರ್  : ಹೂ ಸರಿ .. ಏನ್ ಯಾರನ್ನಾದ್ರು ಲವ್ ಗಿವ್ ಅಂತಾ ಏನಾದ್ರೂ ಮ್..

ಪ್ರಶಾಂತ್ : ಹೇ ಹೇ ನೋ ನೋ .. ಇಲ್ಲಾ .. ನಾನೆಲ್ಲಿ ಈ ಲವ್ ಗಿವ್ ಅಂತಾ .. ಸುಮ್ಮನಿರೋ ನೀನ್ ಒಳ್ಳೆ.. ಎ ..

ಭಾಸ್ಕರ್ : ಯಾಕಪ್ಪ ಅಂಗ್ ಎಳ್ತಿಯಾ .. ಆ ಏನ್ ತಪ್ಪು ಲವ್ ಮ್ಯಾರೇಜ್ ಅಲ್ಲಿ .. ಈಗ್ ನಂದು ಆಗಿಲ್ವಾ ಲವ್ ಮ್ಯಾರೇಜ್ ..

ಪ್ರಶಾಂತ್ : ನೀನ್ ಬಿಡಪ್ಪ ಹೀರೋ ನೀನು .. ನಿಮ್ದೆಲ್ಲಾ ಬೇರೆ ವಿಚಾರ .. ಆದ್ರೆ "ಲವ್ ಮಾಡೋದಕ್ಕೂ ಕ್ವಾಲಿಫಿಕೇಶನ್ ಬೇಕು" ಅದು ನಮಗಿಲ್ಲಾ.. ಸೋ ನೋ ಲವ್ ಗಿವ್ ಡವ್ ಡಿವ್ .. ಆ ಮಾತು ನನ್ ಹತ್ರ ನಡಿಯೋದೇ ಇಲ್ಲಾ.. ಅದು ಬಿಡು ಬೇರೆ ಏನ್ ಹೇಳು ನಿಂದೇನು ಸ್ಪೆಷಲ್ ಈ ವರ್ಷ ... ??????????

(ಮುಂದುವರೆಯುತ್ತದೆ .. !! )


Wednesday 8 August 2012

ದೆವ್ವದ ಮನೆಯಲ್ಲಿ ದುಡ್ಡು .... ಮುಂದುವರೆದ ಭಾಗ [1] ..... !!



               ಅವಳ ಆ ನಗುವನ್ನು ಕೇಳಿ , ಅದೇನೋ ವಿಚಿತ್ರ ಭಯವು ನನ್ನನ್ನು ಸ್ವಲ್ಪ ಹೊತ್ತು ಮೌನವಾಗಿ ನಿಲ್ಲುವಂತೆ ಮಾಡಿತ್ತು .. ಹೆದರಿ ಓಡುವ ಭಯದ ಕ್ಷಣಗಳು ಆದರೂ ಸಹ ಅವಳ ಸೌಂದರ್ಯ ನನ್ನನ್ನು ನಿಂತಲ್ಲೇ ನಿಲ್ಲುವಂತೆ ಮಾಡಿತ್ತು .. ಅವಳು ನಗು ನಗುತ್ತಾ ಕಿಟಕಿಯ ಬಳಿ ಬಂದು , ಮೊದಲು ನಿನ್ನ ಹೆಸರು ಏನು , ನೀನು ಯಾರು , ಏನು ಕೆಲಸ , ಯಾವ ಊರು , ಇಷ್ಟು ಧೈರ್ಯದಲ್ಲಿ ಇಲ್ಲಿ ನಿಂತಿರುವೆ ಎಂದರೆ ನೀನು ಈ ಊರಿನವನಲ್ಲ ಎಂದು ತಿಳಿಯುತ್ತದೆ , ಈ ಮನೆಯ ಹತ್ತಿರ ಏಕೆ ಬಂದೆ ........ ಹೀಗೆ ಇನ್ನೂ ಅನೇಕ ಪ್ರಶ್ನೆಗಳು ಅವಳಿಂದ ಕೇಳಿದಾಗ ನನಗೇನು ಮಾಡಬೇಕು ಎಂಬುದೇ ತೋಚಲಿಲ್ಲ.. ಅವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿದ್ದವು .. ಸಹಾಯ ಮಾಡು ಎಂದು ಕೂಗಿದವಳು ಮತ್ತೆ ಈ ರೀತಿ ನನ್ನನ್ನೇ ಪ್ರಶ್ನೆ ಕೇಳುವುದು ಅದೆಷ್ಟು ಸರಿ ಎಂದು ನಾನು ಯಾವ ಉತ್ತರಗಳನ್ನು ಕೊಡಬೇಕೋ ಎಂಬುದೇ ಅರಿಯದವನಂತೆ , ಬಾಯಿ ತೆಗೆದು ನಾನು ಎಂದು ಹೇಳಿದೆ ಆದರೂ  ಮತ್ತೊಮ್ಮೆ ಮೌನವು ನನ್ನನ್ನು ತನ್ನ ಜಾಲದಲ್ಲಿ ಸೆರೆ ಹಿಡಿಯಿತು.. ಅವಳು ತಕ್ಷಣ ಹೆದರಬೇಡ ನಾನೇನು ಮಾಡುವುದಿಲ್ಲ , ನಿನ್ನಂತಹಾ ಧೈರ್ಯವಂತರು ಬರಲಿ ಎಂದು ನಾನು ಕಾಯುತ್ತಿದ್ದೆ , ನನ್ನ ಬಗ್ಗೆ ತಿಳಿಸುವ ಮೊದಲು ನೀನು ನಿನ್ನ ಪರಿಚಯ ಹೇಳಬೇಕು , ನಿನ್ನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ , ನಾನು ನಂತರವೇ ನನ್ನ ಸಮಸ್ಯೆ ಏನು ಎಂದು ಹೇಳುವೆ ಮತ್ತು ನೀನು ನನ್ನನ್ನು ಇಲ್ಲಿಂದ ಕಾಪಾಡುವ ಶಕ್ತಿ ಯುಕ್ತಿಗಳು ನಿನ್ನಲ್ಲಿ ಇದೆಯೋ ಇಲ್ಲವೋ ಎಂಬುದು ತಿಳಿಯಬೇಕು ..... ಆ ಸುಂದರ ರೂಪವು ನನ್ನಲ್ಲಿ ಸ್ವಲ್ಪ ಸ್ವಲ್ಪ ಧೈರ್ಯ ತುಂಬುತ್ತ , ನನ್ನ ಮಾತನಾಡಿಸುವ ಆ ಕ್ಷಣಗಳು ನಾನೊಬ್ಬ ಅತ್ಯದ್ಭುತ ಕ್ಷತ್ರಿಯ ಎಂಬ ಭಾವನೆಗಳನ್ನು ಮೆಲ್ಲನೇ ನನ್ನಲ್ಲಿ ಮೂಡಿಸಲಾರಂಭಿಸಿದವು .. ಆ ಮಾತುಗಳು ನನ್ನ ಮೌನವನ್ನು ದೂರ ತಳ್ಳುವಂತೆ ಮಾಡಿ , ನಾಲಿಗೆಯು ನರ್ತಿಸುವಂತೆ ಮಾಡಿತ್ತು.. ಪಟಪಟನೆ ಮಾತನಾಡಲು ಶುರು ಮಾಡಿದ ನಾನು ಅವಳಿಗೆ ನನ್ನ ಕಥೆ ಹೇಳಲು ಪ್ರಾರಂಭಿಸಿದೆ...ಒಂದರೆಕ್ಷಣ ನಿಜ ಹೇಳುವುದು ಬೇಡವೆಂದು ನನ್ನ ಮನಸ್ಸು ನನ್ನೊಡನೆ ಹೇಳಿದಂತೆ ಭಾಸವಾಯಿತು .. ತಕ್ಷಣವೇ ನಿಂತಲ್ಲೇ ಒಂದು ಸುಳ್ಳು ಕಥೆಯನ್ನು ಸೃಷ್ಟಿಸುತ್ತಾ ಅದರಲ್ಲಿ ನನ್ನ ಪಾತ್ರವನ್ನು ಹೆಚ್ಚು ಧೈರ್ಯವಂತ , ವೀರಾಧಿವೀರ , ಅಪ್ರತಿಮ ಬುದ್ದಿವಂತ , ಯುದ್ಧ ಕಲೆಯಲ್ಲಿ ಸಂಪೂರ್ಣ ನುರಿತವನು , ಹೆಚ್ಚು ಜನರಿಗೆ ಅದನ್ನು ತಿಳಿಸಿದವನು ಎಂಬ ಮಾತುಗಳನ್ನೆಲ್ಲಾ ಲೀಲಾಜಾಲವಾಗಿ ಅವಳೆದುರು ಹೇಳತೊಡಗಿದೆ..  
ಆ ನನ್ನ ಸುಳ್ಳು ಕಥೆ : ನಾನು ಈ ಊರಿನವನಲ್ಲ . ನನ್ನ ಹೆಸರು ಶ್ರೀಹರಿಕೃಷ್ಣ .... ನಮ್ಮದು ರಾಜವಂಶ , ಕೆಳದಿ ಸಂಸ್ಥಾನದಲ್ಲಿ ಮಹಾರಾಜ ಸೋಮಶೇಖರ ನಾಯಕರ ಆಪ್ತ ಮಿತ್ರವರ್ಗದವದು .. ಕೆಳದಿ ಆಸ್ಥಾನದಲ್ಲಿ ನಮ್ಮ ಮುತ್ತಾತ , ತಾತ , ಅವರ ಚಿಕ್ಕಪ್ಪ , ಅವರ ದೊಡ್ಡಮ್ಮ , ಹೀಗೆ ಎಲ್ಲರೂ ತುಂಬಾ ಸೇವೆಯನ್ನು ಸಲ್ಲಿಸಿದ್ದಾರೆ .. ನಮ್ಮ ವಂಶದವರು ಯುದ್ಧದಲ್ಲಿ ತಮ್ಮದೇ ಆದ ವಿಶೇಷ ಹೋರಾಟದಿಂದ ಶತ್ರುಗಳ ಸದೆಬಡಿದು , ವಿಜಯವನ್ನು ಕೆಳದಿಯ ಪಾಲಾಗಿಸಿದ್ದಾರೆ .. ಕ್ಷತ್ರೀಯ ಕುಲದವರಾದ ನಮ್ಮಲ್ಲಿ ಹರಿಯುತ್ತಿರುವುದು ಕ್ಷತ್ರೀಯ ರಕ್ತ .. ಆದರೆ ಕಾಲವೆಂಬುದು ಸರಿಯಿಲ್ಲವಲ್ಲ .. ಇತಿಹಾಸ ರಚಿಸುವ ಬರಹಗಾರರು ಎಲ್ಲಿಯೂ ನಮ್ಮ ಬಗ್ಗೆ ಹೆಚ್ಚಾಗಿ ಉಲ್ಲೇಖ ಮಾಡಲಿಲ್ಲ .. ಹೀಗಾಗಿ ನಾವು ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.. ಯಾರೀಗೂ ಹೆಚ್ಚು ತಿಳಿಯದೇ ಎಲ್ಲೋ ಮರೆಯಾಗಿ ಹೋದೆವು.......  
                ಹೀಗೆ ಹೇಳುತ್ತಾ ಒಂದು ಕ್ಷಣ ಮಾತ್ರ ನಾನೇನು ಹೇಳಿದೆ ಅವಳಿಗೆ ಎಂಬುದೆಲ್ಲವನ್ನೂ ಮರೆತು ನಾನು ನಿಜಕ್ಕೂ ಕ್ಷತ್ರೀಯ ಎಂಬ ಭಾವನೆ ನನ್ನಲ್ಲಿ ಆವರಿಸಿತ್ತು.. ಆದರೆ ನಾನು ಹೇಳುವ ಪ್ರತೀ ಮಾತುಗಳನ್ನು ತುಂಬಾ ಮಗ್ನಳಾಗಿ ಕೇಳುತ್ತಿದ್ದ ಅವಳನ್ನು ನೋಡಿದಾಗ , ವಿಭಿನ್ನ ಬಗೆಯ ಆಕರ್ಷಣೆ ನನ್ನ ಅವಳತ್ತ ಹೆಚ್ಚು ಹೆಚ್ಚು ಸೆಳೆಯುತ್ತಿತ್ತು.. ಸ್ವಲ್ಪ ಹಾಗೆಯೇ ನನ್ನ ಮಾತುಗಳನ್ನು ನಿಲ್ಲಿಸಿ , ಅವಳನ್ನೇ ನೋಡುತ್ತಾ ನಿಂತುಬಿಟ್ಟೆ .. ಆರೇಳು ನಿಮಿಷಗಳು ಆಗಿತ್ತೇನೋ , ಅವಳು ಮುಂದೇನು ಹೇಳು , ನೀನು ಈ ಊರಿಗೆ ಏಕೆ ಬಂದೆ , ಈ ಮನೆಯ ಹತ್ತಿರ ಏಕೆ ಬಂದೆ ... ಹೀಗೆ ಕೇಳಲು ಅವಳು ನನ್ನ ತಲೆಯಲ್ಲಿ ಏನೇನೋ ಆಲೋಚನೆಗಳ ಕೋಲಾಹಲ .. ಏನಾದರೂ ಹೇಳಲೇಬೆಕಲ್ಲಾ ಎಂದು ಮುಂದುವರೆಸಿದೆ .. ನಾನು ದೇವನಗರಿಯವನು ಅದು ಇಲ್ಲಿಂದ ಸುಮಾರು ನೂರೈವತ್ತು ಕಿಲೋಮೀಟರ್ ದೂರವಿದೆ.. ನಾನು ಇಲ್ಲಿ ಬರಲು ಕಾರಣ ನಮ್ಮ ಸಂಬಂಧಿಕರ ಆಸ್ತಿ ವ್ಯವಹಾರ .. ಅವರ ಹಿರಿಯರು ಬಾಳಿ ಬದುಕಿದ ಊರಿದು .. ಇಲ್ಲಿ ಒಂದು ಕೈಗಾರಿಕೆಯನ್ನು ಆರಂಭಿಸಿ , ಇಲ್ಲಿಯೇ ಕೆಲವು ವರ್ಷಗಳ ಕಾಲ ಉಳಿಯುವ ಆಲೋಚನೆ ಅವರದು .. ಅದಕ್ಕೆ ತುಂಬಾ ವಿಶಾಲವಾದ ಸ್ಥಳವನ್ನು ನೋಡಬೇಕೆಂದು ಈ ಊರಿಗೆ ಅವರೊಡನೆ ಬಂದೆ .. ಹಾಗೆಯೇ ಊರನ್ನೆಲ್ಲಾ ನೋಡುತ್ತಾ  ಒಂದು ಸುತ್ತು ಹಾಕಿ ಬರುತ್ತದೆ , ಈ ಕಡೆಯಿಂದ ಗೆಜ್ಜೆಯ ಸದ್ದು ಕೇಳಿದಂತಾಗಿ ಇಲ್ಲಿ ಬಂದೆ ಮತ್ತು ಮುಂದಿನದೆಲ್ಲಾ ನಿನಗೆ ಗೊತ್ತಿದೆಯಲ್ಲ... ಇನ್ನೇನು ಉಳಿದಿಲ್ಲಾ ಹೇಳಲು ಮತ್ತು ಈ ಮನೆಯ ಕಡೆ ಹೋಗಬೇಡಿ ಎಂಬ ಮಾತುಗಳು ಊರ ಜನರು ತುಂಬಾ ಹೇಳಿದರು ಹಾಗು ಈ ಮನೆಯ ಬಗ್ಗೆ ಏನೇನೋ ಕಥೆಗಳನ್ನು ಹೇಳಿದ್ದರು .. ಆದರೂ ಆ ಸದ್ದು ಮತ್ತು ಬೆಳಕು , ನನ್ನನ್ನು ಇಲ್ಲಿಯವರೆಗೂ ಬರುವಂತೆ ಮಾಡಿದವು ಎಂದು ಹೇಳಿ , ಅವಳನ್ನೇ ನೋಡುತ್ತಾ , ಅವಳ ಉತ್ತರಕ್ಕಾಗಿ ಕಾಯುತ್ತಿದ್ದೆ .... ನಾನು ಹೇಳಿದ ಪ್ರತೀ ಮಾತುಗಳನ್ನು ಸತ್ಯವೆಂದು , ನಾನು ನಿಜಕ್ಕೂ ಕ್ಷತ್ರೀಯ ವಂಶದವನು ಎಂದು ನಂಬಿದ ಅವಳ ಮಾತುಗಳಲ್ಲಿ ಹೆಚ್ಚು ಆತ್ಮೀಯತೆ ಇದ್ದಂತೆ ಮಾತನಾಡಿಸಲು ಶುರು ಮಾಡಿದಳು .. ನಿನ್ನನು ಸಂಪೂರ್ಣ ನಂಬುತ್ತೇನೆ , ನೀನು ಹೇಳಿದ ಕಥೆಯನ್ನು ಕೇಳಿದ ಮೇಲೆ ನಾನ್ಯಾರು ಮತ್ತು ಇಲ್ಲಿ ಹೇಗೆ ಬಂದೆ .. ಈ ಕಷ್ಟದಲ್ಲಿ ಸಿಲುಕಲು ಏನು ಕಾರಣ ಎಲ್ಲವನ್ನು ಹೇಳುತ್ತೇನೆ .. ಆದರೆ ನೀನು ನನಗೆ ಕಥೆ ಕೇಳಿದ ಮೇಲೆ ಮೋಸ ಮಾಡಬಾರದು ಏಕೆಂದರೆ ಇದು ಮೂರು ಸಾವಿರ ವರ್ಷಗಳ ಹಿಂದಿನ ಮಾತು ಎಂದು ಅವಳು ಹೇಳಿದ ತಕ್ಷಣವೇ ಮತ್ತೆ ವಿಚಿತ್ರ ಆಶ್ಚರ್ಯ ಮತ್ತು ಕುತೂಹಲ ಅವಳನ್ನು ನೋಡುತ್ತಾ ನಿಂತಲ್ಲೇ ನಡುಗಿದೆ .. ನನ್ನ ನಡುಕವನ್ನು ಗಮನಿಸಿದ ಅವಳು ಈ ಮಾತುಗಳನ್ನು ಕೇಳಿ ನಡುಗಬೇಡ , ಸತ್ಯವಾಗಿಯೂ ಇದು ಮೂರುಸಾವಿರ ವರ್ಷಗಳ ಹಿಂದಿನ ಘಟನೆ , ಅಲ್ಲಿಂದಲ್ಲೇ ಈ ಸಮಸ್ಯೆಯ ಆರಂಭ , ಆದರೆ ನಾನು ಅಷ್ಟು ವರ್ಷದವಳಲ್ಲಾ , ನನಗಿನ್ನೂ ತುಂಬಾ ಚಿಕ್ಕ ವಯಸ್ಸು , ನಾನು ಇಪ್ಪತ್ತೆಂಟು ವರ್ಷದವಳು , ಆದರೆ ಈ ಮನೆಯ ಕಥೆ ಮತ್ತು ಇಲ್ಲಿನ ಸಮಸ್ಯೆ ತಲತಲಾಂತರಗಳಿಂದ ನಡೆದು ಬಂದದ್ದು ಮತ್ತು ಈಗ ನನ್ನಲ್ಲಿ ಬಲಿಪಶುವಾಗಿ ಮಾಡಿದ್ದಾರೆ .. ಈ ಮನೆಯ ಬಗ್ಗೆ ಹೇಳಲು ಹೆಚ್ಚು ಸಮಯ ಬೇಕು , ಈ ದಿನ ಸಾಧ್ಯವಿಲ್ಲ , ಈಗಾಗಲೇ ಬೆಳಕಾಗುವ ಸಮಯ , ನೀನು ನಾಳೆ ರಾತ್ರಿ ಬೇಗನೆ ಇಲ್ಲಿ ಬಾ .. ಮತ್ತು ಯಾರಿಗೂ ತಿಳಿಸಬೇಡ , ನೀನೊಬ್ಬನೇ ಬಾ , ನೀನು ಬಂದೇ ಬರುವೆ ಎನ್ನುವ ನಂಬಿಕೆ ನನ್ನಲ್ಲಿದೆ ಹಾಗೂ ನಿನಗಾಗಿ ಕಾಯುತ್ತ ಇರುತ್ತೇನೆ .. ಎಂದು ಅವಳು ಹೇಳಿದ ತಕ್ಷಣಕ್ಕೆ ನಾನು ನನಗರಿವಿಲ್ಲದಂತೆಯೇ ಎಲ್ಲದಕ್ಕೂ ತಲೆಯಾಡಿಸಿ ಒಪ್ಪಿಕೊಂಡು , ಸರಿ ನಾನು ಖಂಡಿತ ನಾಳೆ ಬರುವೆ ಎಂದು ಹೇಳಿ ಅಲ್ಲಿಂದ ಬೇಗಬೇಗನೇ ಹೊರಟು ಬಂದೆ.. ಯಾರು ಸಹ ನನ್ನನ್ನು ಆ ಕಿಟಕಿಯ ಬಳಿ ನಿಂತು ಮಾತನಾಡುವುದನ್ನು ನೋಡಿಲ್ಲಾ ಎಂಬ ಸಮಾಧಾನವು ಮತ್ತು ನಾಳೆ ಅವಳ ಬಳಿ ಹೋಗುವುದೋ ಬೇಡವೋ ಎಂಬ ಗೊಂದಲಮಯ ಚಿಂತನೆಗಳು , ಜೊತೆಯಲ್ಲಿ ಆಸ್ತಿ ವ್ಯವಹಾರದ ಕೆಲಸ , ಹೀಗೆಲ್ಲಾ ಅನೇಕ ಆಲೋಚನೆಯಲ್ಲಿ ನಾನು ಮನೆಯತ್ತ ಹೋಗುತ್ತಿದ್ದಂತೆಯೇ , ಅಲ್ಲಿದ್ದ ನನ್ನ ಸಂಬಂಧಿಕರು ಮತ್ತು ಊರ ಜನರೆಲ್ಲಾ ಎಲ್ಲಿ ಹೋಗಿದ್ದೆ ರಾತ್ರಿಯೆಲ್ಲಾ , ಆ ಮನೆಯ ಹತ್ತಿರ ಏನಾದರೂ ಹೋಗಿದ್ದೆಯಾ , ಆ ಕಡೆ ಹೋಗುವುದು ಬೇಡ ಎಂದು ಹೇಳಿದ ಮೇಲೂ ಅಲ್ಲಿ ಹೋಗುವ ಸಾಹಸ ನೀನೇಕೆ ಮಾಡಿದ್ದು ... ಎಂದೆಲ್ಲಾ ಕೇಳಲು ಶುರು ಮಾಡಿದರು .. ನಾನು ಸಹ ಸದ್ಯಕ್ಕೆ ಈಗೇನು ಕೇಳಬೇಡಿ , ತುಂಬಾ ನಿದ್ದೆ ಬರುತ್ತಿದೆ , ರಾತ್ರಿ ನಿದ್ದೆ ಮಾಡಿಲ್ಲಾ , ಸ್ವಲ್ಪ ಹೊತ್ತು ಮಲಗಿ ಆಮೇಲೆ ಎಲ್ಲರಿಗೂ ಉತ್ತರಿಸುವೆ ಎಂದು ಹೇಳಿ ಹೋಗಿ , ನನ್ನ ರೂಮಿನಲ್ಲಿ ನಿದ್ದೆ ಮಾಡಿದೆ.. ಸಂಜೆ ನಾಲ್ಕು ಗಂಟೆಯಲ್ಲಿ ಎದ್ದ ನಂತರ ನಮ್ಮ ಅತ್ತೆಯವರು ಊಟಕ್ಕೆ ಕರೆದರು.. ನಾನು ಊಟ ಮುಗಿಸಿದೆ .. ಆರಾಮಾಗಿ ಮನೆಯ ಪಕ್ಕದ ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಓಡಾಡಿ ಬರಲು ಹೋದೆ.. ಆಗ ಜನರೆಲ್ಲರೂ ನನ್ನ ಸುತ್ತುವರೆದರು , ಎಲ್ಲರೂ ಒಬ್ಬೊಬ್ಬರೇ ಆ ಮನೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ನಾನು ನನಗೇನು ಆ ಕ್ಷಣಕ್ಕೆ ತಿಳಿದದ್ದೋ ಅದನ್ನೇ ಉತ್ತರಿಸುತ್ತ ಎಲ್ಲರನ್ನು ಸಮಾಧಾನ ಮಾಡಿದೆ .. ಆಗ ತಿಳಿದದ್ದು ಒಂದು ವಿಚಾರ ಆ ಮನೆಯ ಹತ್ತಿರ ಹೋಗಲು ಎಲ್ಲರೂ ಹೆದರುತ್ತಾರೆ .. ಅದು ದೆವ್ವದ ಮನೆ ಎಂದು ಊರೆಲ್ಲಾ ನಂಬಿದೆ.. ಇನ್ನು ಈ ರಾತ್ರಿ ನಾನು ಆ ಮನೆಯ ಬಳಿ ಹೋಗಲು ಯಾರು ಸಹ ಬಿಡುವುದಿಲ್ಲ ಮತ್ತು ಆ ಮನೆಯ ಕಿಟಕಿಯ ಹತ್ತಿರ ನಡೆದ ವಿಚಾರವನ್ನು ತಿಳಿಸುವ ಮನಸ್ಸಿದ್ದರೂ ಸಹ ಆ ಚೆಲುವಿನ ಮೊಗವು , ಅವಳ ಸೊಬಗಿನ ಸೌಂದರ್ಯ ನನ್ನನ್ನು ಯಾವುದನ್ನೂ ಹೇಳದಂತೆ ತಡೆಯಿತು .. ಮತ್ತು ಈ ರಾತ್ರಿ ಅವಳ ಕಥೆ ಕೇಳುವ ಕುತೂಹಲಕ್ಕೆ ಮತ್ತಷ್ಟು ಜೀವ ಬಂದಂತೆ , ಅದು ನನ್ನನ್ನು ಆ ಮನೆಯತ್ತ ಹೋಗಲು ಪ್ರೇರೇಪಿಸುತ್ತಿತ್ತು.. ಎಲ್ಲರ ಕಣ್ತಪ್ಪಿಸಿ , ಯಾರಿಗೂ ಸುಳಿವೇ ಸಿಗದಂತೆ ಆ ಮನೆಯ ಬಳಿ ಈ ರಾತ್ರಿ ಹೇಗೆ ಹೋಗುವುದು ಎಂಬ ಆಲೋಚನೆಯ ಚಿಂತನೆಯಲ್ಲಿಯೇ ಮನೆಗೆ ಹೋಗಿ ಬೇಗನೇ ಊಟ ಮುಗಿಸಿ ಮತ್ತು ಅವಳಿಗೂ ತಿನ್ನಲು ಸ್ವಲ್ಪ ಕಟ್ಟಿಕೊಂಡು ಹೋಗೋಣವೆಂಬ ವಿಚಾರವನ್ನು ನೆನೆಯುತ್ತಾ , ಪಾರ್ಕಿನಿಂದ ಮನೆಗೆ ಹೋದೆ.. ಮತ್ತು ಹೋಗುವಾಗ ದಾರಿಯಲ್ಲಿ ಆ ದೆವ್ವದ ಮನೆಯ ದಾರಿಯನ್ನು ಗಮನಿಸುತ್ತಾ , ಯಾರಿಗೂ ತಿಳಿಯದಂತೆ ಹೇಗೆ ಆ ದೆವ್ವದ ಮನೆ ಹತ್ತಿರ ಹೋಗುವುದು ಎಂಬ ಯೋಜನೆಯನ್ನು ಹಾಕಿಕೊಳ್ಳುತ್ತಾ ಮನೆ ತಲುಪಿದೆ.....

(ಮುಂದುವರೆಯುವುದು .... )

Tuesday 3 July 2012

ನಾನು ನನ್ನ ಕವನ ***** ಮುಂದುವರೆದ ಭಾಗ [2]..... >>>>> :)




ನಾನು ನನ್ನ ಕವನ 
****************************************
ಮುಂದುವರೆದ ಭಾಗ.....[2] >>>>>>> :)


            ಅವಳ ಮಾತುಗಳು ಮೆಲ್ಲಮೆಲ್ಲನೇ ನನ್ನ ಕಿವಿಗಳನ್ನು ಸೋಕಿದಾಕ್ಷಣ ನಾನು ನನ್ನನ್ನೇ ಮರೆತಂತಾಗಿ , ಹಳೆಯ ಆ ದಿನಗಳು ಕಣ್ಣೆದುರಲ್ಲೇ ಬಂದು ನಿಂತಂತೆ , ಅದೆಷ್ಟು ನೈಜ ಕಲ್ಪನೆ ... ಹಾಗೆಯೇ ಅವಳ ಮಾತುಗಳಲ್ಲಿ ತಲ್ಲೀನನಾಗಿಬಿಟ್ಟೆ...

           "ಅಂಕಲ್ ನಿಮಗೆ ನಿಮ್ಮ ಕಾಲೇಜಿನ ದಿನಗಳು ನೆನಪಿದೆಯೇ ? ಆಗ ನೀವು ನಿಮ್ಮ ಸ್ನೇಹಿತರೆಲ್ಲಾ ಸೇರಿ ಒಂದು ಗ್ರೂಪ್ ಮಾಡ್ಕೊಂಡಿದ್ರಿ.. ಅದಕ್ಕೆ ಇಬ್ಬರು ಲೀಡರ್ ಕೂಡ ಸೆಲೆಕ್ಟ್ ಮಾಡ್ಕೊಂಡಿದ್ರಿ . ಒಬ್ಬರು ಹುಡುಗರ ಲೀಡರ್ & ಮತ್ತೊಬ್ಬರು ಹುಡುಗಿಯರ ಲೀಡರ್ .. ಆ ಹುಡುಗರ ಲೀಡರ್ ನೀವೇ & ಹುಡುಗಿಯರ ಲೀಡರ್ ಹೆಸರು ಸ್ವಪ್ನ .. ನಿಮಗೆ ಸ್ವಪ್ನ ಅವರ ನೆನಪು ಇದೆಯಾ .." ಆಗ ನಾನು ತಕ್ಷಣ ಏನನ್ನೋ ಹುಡುಕುತ್ತಿರುವವನಂತೆ ಮನದಲ್ಲಿ ವಿಶೇಷ ಆಲೋಚನೆಗಳು ಮೂಡಿದಂತೆ , ಮಂದವಾಗಿ ಬೆಳಕೊಂದು ಮೂಡಿ , ಅದರಲ್ಲಿ ಸ್ವಪ್ನಳ ಪ್ರತಿಬಿಂಬವು ಕಂಡಂತೆ ಭಾಸವಾಗಿ ನಾನು "ಹೌದೌದು ಸ್ವಲ್ಪ ಸ್ವಲ್ಪ ನೆನಪಿಗೆ ಬರ್ತಾ ಇದೆ. ಅವಳಿಗೆ ವೈಟ್ ಕಲರ್ ಡ್ರೆಸ್ ಅಂದ್ರೆ ತುಂಬಾ ಇಷ್ಟ ಇತ್ತು .. ಅವಳೇನಾ ನೀನು ಹೇಳ್ತಾ ಇರುವಾ ಸ್ವಪ್ನ.."

             ಅವಳು ಸಹ ಸ್ವಲ್ಪ ಯೋಚನೆ ಮಾಡುತ್ತಾ ಕಿಟಕಿಯ ಬಳಿಯಿಂದ ಬಂದು ಚೇರಿನಲ್ಲಿ ಕೂತಳು .. ಹಾಗೆಯೇ ಕಾಫಿಯ ಕಪ್ ಅನ್ನು ಟೀಪಾಯಿ ಮೇಲೆ ಇಟ್ಟಳು .. ನೋಡಿದಾಗ ಅದು ಖಾಲಿ ಇತ್ತು .. ಅವಳು ಮಾತನಾಡುತ್ತಲೇ ಕಾಫಿಯನ್ನು ಸಹ ಕುಡಿದು ಮುಗಿಸಿದ್ದಳು .. ಆದರೆ ನಾನು ಮೈಮರೆತ ಕಾರಣ ನನ್ನ ಕಪ್ ಅಲ್ಲಿ ಇನ್ನೂ ಸ್ವಲ್ಪ ಕಾಫಿ ಹಾಗೆಯೇ ಉಳಿದಿತ್ತು .. ಅದನ್ನು ಕಂಡು ತಣ್ಣಗಾಗುವುದೆಂದು ಬೇಗಬೇಗನೇ ನಾನು ಕಾಫಿಯನ್ನು ಕುಡಿದು ಮುಗಿಸಿ , ನನ್ನ ಕಪ್ ಅನ್ನು ಸಹ ಟೀಪಾಯಿ ಮೇಲೆ ಇಟ್ಟೆ. ಅಷ್ಟರಲ್ಲಿ ಅವಳಿಗೆ ಅದೇನೋ ನೆನಪಾದಂತೆ ತಕ್ಷಣ "ಹಾ ಹಾ ಅಂಕಲ್ ನಿಮ್ಮ ಮಾತು ನಿಜ.. ಬಿಳಿ ಬಣ್ಣದ ಬಟ್ಟೆಗಳು ಅಂದ್ರೆ ತುಂಬಾನೇ ಇಷ್ಟ.. ಮತ್ತೆ ನಿಮ್ಮ ಗಿಫ್ಟ್ ಕೂಡ ಇನ್ನೂ ಜೋಪಾನವಾಗಿ ಇಟ್ಟಿದ್ದಾರೆ .. ನೀವು ಕೊಟ್ಟಿದ್ದ ಬಿಳಿ ಬಣ್ಣದ ವಾಚ್ ಈಗಲೂ ಕೇವಲ ಮುಖ್ಯವಾದ ಸಮಾರಂಭಗಳಲ್ಲಿ ಮಾತ್ರ ಹಾಕೊಳ್ತಾರೆ.. ಇನ್ನೂ ನಿಮ್ಮ ವಿಷಯ ತುಂಬಾ ಮಾತಾಡ್ತಾರೆ." ಇದನ್ನೆಲ್ಲಾ ಕೇಳುವಾಗ ನಾನು ಸುಮ್ಮನಿರದೇ ಅವಳನ್ನು ಕೇಳಿದೆ "ಸ್ವಪ್ನ ನಿನಗೆ ಹೇಗೆ ಗೊತ್ತು ಕವನ.. ನೀನು ಸ್ವಪ್ನ ಮಗಳ ಹಾಗಿದ್ರೆ.. ನಿನ್ನ ಮತ್ತು ಸ್ವಪ್ನಳ ಪರಿಚಯ ಏನು , ಹೇಗೆ .. ಸ್ವಪ್ನ ಈಗ ಎಲ್ಲಿದ್ದಾಳೆ , ಹೇಗಿದ್ದಾಳೆ.. ? " ಮಾತಿನ ನಡುವಲ್ಲಿ ನನ್ನ ಪ್ರಶ್ನೆಗಳು ಅವಳ ಮುಖದಲ್ಲಿ ಆಶ್ಚರ್ಯ ಮೂಡಿಸಿದವು .. ಅವಳು ಒಂದರ್ಧ ನಿಮಿಷ ಮೌನವಾಗಿ ಚಿಂತಿಸುತ್ತಾ ಮಾತು ಮುಂದುವರೆಸಿದಳು .

             "ಎಲ್ಲಾ ವಿವರವಾಗಿ ಹೇಳ್ತೀನಿ ಅಂಕಲ್ .. ಆದರೆ ನೀವು ತಿಳಿದುಕೊಂಡಂತೆ ನಾನು ಸ್ವಪ್ನ ಅವರ ಮಗಳು ಅಲ್ಲಾ .. ಆದರೂ ಮಗಳಿನ ತರಹಾನೇ.. ಸ್ವಪ್ನ ಅವರು ನಮ್ಮ ಪಕ್ಕದ ಮನೆಯವರು .. ಹಾಗೆಯೇ ಸ್ವಲ್ಪ ದಿನಗಳು ಆದ ಮೇಲೆ ಗೊತಾಗಿದ್ದು , ಅವರು ನಮ್ಮ ದೂರದ ಸಂಬಂಧಿಗಳು ಅಂತಾ.. ಸ್ವಪ್ನ ಅವರು ಸಂಬಂಧದಲ್ಲಿ ನನ್ನ ಅಕ್ಕ.. ಅವರು ವಿಷಯ ಗೊತ್ತಾದಾಗ ಒಂದು ವಿಚಾರ ತಿಳೀತು.. ನಮ್ಮ ಮತ್ತು ಅವರ ಮನೆಯವರಲ್ಲಿ ತುಂಬಾ ವರ್ಷಗಳ ಹಿಂದೆಯೇ ಆಸ್ತಿ ಜಗಳ ಹುಟ್ಟಿಕೊಂಡು , ಎಲ್ಲಾ ದೂರ ದೂರ ಆಗಿದ್ದು .. ಆದರೆ ಅದಾದ ನಂತರ ಆ ಮನೆಯವರಲ್ಲಿ ಯಾರನ್ನೂ ಸಹ ಮಾತನಾಡಿಸುವ ಅವಕಾಶ ಇರಲಿಲ್ಲ ಮತ್ತು ಅದಕ್ಕೆ ಒಪ್ಪಿಗೆಯೂ ಕೊಡ್ತಾ ಇರಲಿಲ್ಲ.. ಹಾಗೆಯೇ ಕೆಲಸ ಕಾರ್ಯ ಅಂತಾ ಒಬ್ಬೊಬ್ಬರೇ ಊರು ಬಿಟ್ಟು ಊರು ಬದಲಾಗುತ್ತಾ ಎಲ್ಲಾ ದೂರ ದೂರ ಆಗಿ, ಹೆಚ್ಚಾಗಿ ಎಲ್ಲರ ಸಂಪರ್ಕವೂ ತಪ್ಪಿ ಹೋಗಿ ಈಗ ನಾವಷ್ಟೇ ನಮ್ಮೂರಲ್ಲಿ ಮತ್ತು ನಮ್ಮ ಹಿರಿಯರ ಬಗ್ಗೆ, ನಮ್ಮ ವಂಶ , ಅಜ್ಜ ಅಜ್ಜಿ , ಮುತ್ತಜ್ಜ , ಮುತ್ತಜ್ಜಿ .. ಯಾರು ಏನು ಅನ್ನೋದೆಲ್ಲಾ ಇದುವರೆಗೂ ಗೊತ್ತೇ ಇರಲಿಲ್ಲ.. ಪಕ್ಕದ ಮನೆ ಅಕ್ಕ ಅವರು ಕಥೆಗಳನ್ನು ತುಂಬಾ ಚೆಂದ ಹೇಳ್ತಾರೆ ಅಂತಾ ಅವರ ಕಥೆ ಕೇಳೋಕ್ಕೆ ಮತ್ತೆ ಸುಮ್ಮನೆ ಕಾಲ ಕಳೆಯೊಕ್ಕೆ , ಅವರ ಜೊತೆ ಮಾತಾಡೋಕ್ಕೆ ಹೋಗ್ತಾ ಇದ್ದೆ.. ಆಗ ಮಾತು ಮಾತಿನಲ್ಲೇ ಸ್ವಪ್ನ ಅಕ್ಕ ಅವರು ಕೂಡ ನಮ್ಮ ರಿಲೇಟಿವ್ ಅನ್ನೋದು ತಿಳೀತು.. ಆದರೆ ಹೆಚ್ಚಾಗಿ ಪಕ್ಕದ ಮನೆಯ ಅಕ್ಕ ಅಂತಾನೇ ನಾನು ಮೊದಲಿಂದಾನೂ ಇಷ್ಟಪಟ್ಟಿರೋ ಕಾರಣ ಅವರನ್ನು ಈಗಲೂ ಹಾಗೆಯೇ ತಿಳ್ಕೊಂಡಿರೋದು.. ಅವರು ಸಹ ನನ್ನನ್ನು ಮಗಳಿನ ಹಾಗೆಯೇ ತಿಳ್ಕೊಂಡಿದ್ದಾರೆ .. ಮನೆ ಕೆಲಸ , ಅಡುಗೆ ಮಾಡೋದು ಎಲ್ಲಾ ಕಲಿಸಿಕೊಡ್ತಾರೆ .. ಡ್ರಾಯಿಂಗ್ , ಪೇಂಟಿಂಗ್ , ಡ್ಯಾನ್ಸ್ ಇನ್ನೂ ತುಂಬಾ ವಿಷಯಗಳನ್ನು ಹೇಳಿ ಕೊಡ್ತಾರೆ.. ಆಗಾಗ ಕಾಲೇಜು ಸಬ್ಜೆಕ್ಟ್ ಅಲ್ಲೂ ಸಹ ನೋಟ್ಸ್ ಬರಿಯೋಕ್ಕೆ ಹೆಲ್ಪ್ ಕೂಡ ಮಾಡ್ತಾರೆ.. ಸ್ವಪ್ನ ಅಕ್ಕ ಅವರು ನನಗೆ ತುಂಬಾ ತುಂಬಾ ಇಷ್ಟ......"


                          ಹೋ ಹೋ ಕವನ ಮಾತುಗಳನ್ನು ಕೇಳ್ತಾ ಇದ್ದಾಗ ನನ್ನ ಕಾಲೇಜು ದಿನಗಳು ತಲೆಯಲ್ಲಿ ಸುತ್ತುತ್ತ ಸುತ್ತುತ್ತ , ಎಲ್ಲೆಲ್ಲಿ ನೋಡಿದರೂ ಸ್ವಪ್ನ ಕಾಣಿಸುವಂತೆ ಭಾಸವಾಗುತ್ತಿತ್ತು.. ಕವನಳ ಇಷ್ಟುದ್ದ ಮಾತುಗಳು ಮತ್ತು ಇನ್ನೂ ಸಹ ಅವಳ ಮಾತುಗಳು ಮುಗಿದಿರಲಿಲ್ಲ .. ಕವನ ಅವಳ ಮಾತುಗಳಲ್ಲಿ ಸ್ವಪ್ನಳ ಗುಣಗಾನ ಮಾಡುತ್ತಿದ್ದಳು .. ಸ್ವಪ್ನಳ ಹೆಲ್ಪಿಂಗ್ ನೇಚರ್ ಆ ರೀತಿ ಇತ್ತು .. ಅವಳು ಎಲ್ಲರಿಗೂ ಸಹಾಯ ಮಾಡುವ ಸ್ವಭಾವದವಳು .. ಹಾಗೂ ಸ್ವಪ್ನ ಎಲ್ಲರ ಜೊತೆಯಲ್ಲೂ ಬಹು ಬೇಗನೇ ಹೊಂದಿಕೊಳ್ಳುತ್ತಿದ್ದಳು.. ಇದೇ ಕಾರಣ ಅವಳು ಹುಡುಗಿಯರ ಲೀಡರ್ ಆಗಿ ಆಯ್ಕೆ ಆಗಿದ್ದಳು .. ಹಾಗೆಯೇ ತುಂಬಾ ದಿನಗಳು ಆಗಿದ್ದವು ನಾನು ಸ್ವಪ್ನಳನ್ನು ನೆನಪಿಸಿಕೊಂಡು ಮತ್ತು ಈಗ ಸ್ವಪ್ನಳ ನೆನಪು , ಜೊತೆಯಲ್ಲಿ ಕವನ ಯಾರು ಎನ್ನುವುದು ಸಹ ತಿಳಿಯಿತು .. ಆದರೆ ಕವನ ನನ್ನ ಜೊತೆ ಮಾತಾಡಲು ಬಂದ ನಿಜವಾದ ವಿಷಯ ಯಾವುದು , ಅವಳು ಏನು ಹೇಳಬೇಕು ಅಂತಾ ಇಲ್ಲಿ ಬಂದಿದ್ದಾಳೆ .. ಅದ್ಯಾವುದೋ ಹಳೆಯ ಮನೆಯ ಹತ್ರ ಇರುವ ಕಾರು ತೋರಿಸಬೇಕು ಅಂತಾ ಹೇಳ್ತಿದ್ದಾಳೆ ... ಆ ಕಾರು ಯಾರದ್ದು .. ಅದನ್ನು ನಾನು ಏಕೆ ನೋಡಬೇಕು .. ಹೀಗೆ ಇನ್ನೂ ಹಲವಾರು ಪ್ರಶ್ನೆಗಳು ಮನದಲ್ಲೇ ಸರ್ಕಸ್ ಮಾಡಿಸುತ್ತಿತ್ತು ..

                               ಆದರೆ ಕವನ ಇನ್ನೂ ಸ್ವಪ್ನಳ ವಿಷಯದಲ್ಲೇ ಮಾತುಗಳನ್ನು ನಿಲ್ಲಿಸದಂತೆ ಹೇಳುತ್ತಲೇ ಇದ್ದಳು..ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದು ಯಾವಾಗ ? ಎನ್ನುವ ಚಿಂತನೆಯಲ್ಲಿಯೇ ನಾನು ಕವನಳನ್ನು ಮಾತನಾಡಿಸಲು ಇನ್ನೇನು ಕವನ ಎಂದು ಕೂಗುವಷ್ಟರಲ್ಲಿ , ನನ್ನ ಮೊಬೈಲ್ ರಿಂಗ್ ಆಯಿತು.. "ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ.. ಕನ್ನಡ ಡಿಂಡಿಮ ಬಾರಿಸುವೆ .. ಎಂದೂ ಬರೆಯುವ ಬಾಳುವೆ" .. ನಾನು ಮೊಬೈಲ್ ಅನ್ನು ಜೇಬಿನಿಂದ ಹೊರ ತೆಗೆಯುವುದನ್ನು ನೋಡಿದ ಕವನ ಅವಳ ಮಾತುಗಳನ್ನು ನಿಲ್ಲಿಸಿದಳು .. ನಾನು ಮೊಬೈಲ್ ಅಲ್ಲಿ ನೋಡಿದಾಗ ಅದು ಪ್ರಿಯ ಮಾಡಿದ್ದ ಫೋನ್ .. ನಾನು ರಿಸೀವ್ ಮಾಡಿ " ಹಲೋ ಪ್ರಿಯ .. ಅಲ್ಲಿ ಮಳೆ ಕಡಿಮೆ ಆಗಿದೆಯಾ.. ಇಲ್ಲಿ ನಮ್ಮ ಮನೆ ಕಡೆ ಮಳೆ ಇನ್ನೂ ಸ್ವಲ್ಪ ಜೋರಾಗಿದೆ .. ನಾನು ಸ್ವಲ್ಪ ತಡವಾಗಿ ಬರ್ತೀನಿ" ಎಂದು ಹೇಳಿದೆ.. ಆದಕ್ಕೆ ಪ್ರಿಯ "ಸರಿ ಸರಿ ಆರಾಮಾಗಿ ಬಾ .. ರಿಸ್ಕ್ ಮಾಡ್ಕೋಬೇಡ .. ಮಳೆಯಲ್ಲಿ ನೆನಕೊಂಡು ಬರೋದು ಬೇಡ.... ಹಾಗೆಯೇ ನಿನ್ನ ಬುಕ್ ಕೂಡ ಎಲ್ಲೂ ಕಳೆಯೋಲ್ಲ.. ಮರೆತು ಮತ್ತೆಲ್ಲೋ ಇಡ್ತೀನಿ ಅನ್ನೋ ಭಯನೂ ಬೇಡ .. ನಾನು ನನ್ನ ಕೈಯಲ್ಲೇ ಹಿಡ್ಕೊಂಡಿರ್ತೀನಿ .. ನೀನು ಬರೋವರೆಗೂ .. ಆದರೆ ಈ ಬುಕ್ ಓದುತ್ತಾ ಇದ್ದೆ .. ಇದರಲ್ಲಿ ಕೆಲವು ಪೇಜಸ್ ಸರಿಯಾಗಿ ಕಾಣಿಸ್ತಾ ಇಲ್ಲಾ.. ಹಳೆಯದ್ದು ಅಲ್ವಾ ಅದಕ್ಕೆ ಕೆಲವು ಪೇಜಸ್ ಡಸ್ಟ್ ಆಗಿ , ಬರೆದಿರೋದು ಎಲ್ಲಾ ಕ್ಲೀನ್ ಆಗಿ ಕಾಣ್ತಾ ಇಲ್ಲಾ .. ಇದರಲ್ಲಿ ಸ್ವಪ್ನ ಅನ್ನುವ ಹುಡುಗಿಯ ಪರಿಚಯ ಮತ್ತು ಅವಳ ಎಷ್ಟೋ ಡೀಟೇಲ್ ಸ್ಟೋರೀನೆ ಇದೆ.. ಯಾರು ಸ್ವಪ್ನ ಅಂದ್ರೆ.." ಅಂತಾ ಪ್ರಿಯ ನನ್ನ ಕೇಳಿದಳು.. ಆಗ ಇಲ್ಲಿ ಕವನ ಇದುವರೆಗೂ ಹೇಳಿದ ಸ್ವಪ್ನಳ ಎಲ್ಲಾ ವಿಷಯವೂ ಮತ್ತೆ ಮತ್ತೆ ನೆನಪಾಗಿ ಕಾಡುವಂತೆ ಅನ್ನಿಸತೊಡಗಿತು.. ಹಾಗೆಯೇ ಅಲ್ಲಿ ಪ್ರಿಯ ಕೂಡ ಸ್ವಪ್ನಳ ಸುದ್ದಿಯನ್ನು ಕೇಳಿ , ನನ್ನ ಕುತೂಹಲಗಳನ್ನು ಮತ್ತಷ್ಟು ಹೆಚ್ಚಿಸಿದ್ದಳು .. ಆ ಪುಸ್ತಕದಲ್ಲಿ ಸ್ವಪ್ನಳ ಕುರಿತು ನಾನೇನು ಬರೆದಿದ್ದೆ ಎನ್ನುವುದನ್ನು ನೆನಪು ಮಾಡಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗಲಿಲ್ಲ.. ಆಗ ನಾನು ಫೋನಿನಲ್ಲಿ "ಪ್ರಿಯ ಸ್ವಪ್ನ ನನ್ನ ಕಾಲೇಜು ಫ್ರೆಂಡ್.. ನಾನು ಆಮೇಲೆ ಸ್ವಪ್ನಳ ವಿಷಯ ಎಲ್ಲಾ ಹೇಳ್ತೀನಿ.. ಸ್ವಲ್ಪ ಹೊತ್ತು ತಾಳು .. ಮಳೆ ನಿಂತ ಕೂಡಲೇ ಬರುವೆ.. ಎಲ್ಲಾ ಡೀಟೇಲ್ ಆಗಿ ಮಾತಾಡೋಣ." ಅಂತಾ ಹೇಳುವಷ್ಟರಲ್ಲಿ ಇಲ್ಲಿ ಕವನಳ ಮುಖದಲ್ಲೂ ಸಹ ಒಂದು ವಿಶೇಷ ಹೊಳಪು ಕಾಣಿಸುತ್ತಿತ್ತು .. ನಾನು ಯಾರೊಂದಿಗೆ ಫೋನ್ ಅಲ್ಲಿ ಮಾತಾಡುತ್ತಿರುವೆ.. ಯಾರಿಗೆ ಸ್ವಪ್ನಳ ವಿಚಾರ ಹೇಳುತ್ತಿರುವೆ ಎಂದು ತಿಳಿಯುವ ಕಾತರವೂ ಸಹ ಕವನಳ ಮುಖದಲ್ಲಿ ಬಿಂಬಿಸುತ್ತಿತ್ತು.. ಹಾಗೆಯೇ ನಾನು ಕಿಟಕಿಯ ಹೊರಗೆ ಸ್ವಲ್ಪ ಕಣ್ಣಾಡಿಸುತ್ತಾ , ಮಳೆ ಕಡಿಮೆ ಆಗುತ್ತಿರುವುದನ್ನು ಕಂಡು , ಮನದಲ್ಲೇ ಖುಷಿಯಾಗಿ .. "ಪ್ರಿಯ ಈಗ ಇಲ್ಲಿ ಮಳೆಯೂ ಸಹ ಕಡಿಮೆ ಆಗುವಂತೆ ಕಾಣುತ್ತಿದೆ . ನಾನು ಮಳೆ ನಿಂತ ತಕ್ಷಣ ಹೊರಟು ಬರುವೆ .. ನೀನು ಮನೆಯಲ್ಲಿಯೇ ಇರು .. ಎಲ್ಲೋ ಹೋಗಬೇಡ ಪ್ಲೀಸ್" ಎಂದು ಹೇಳಿದಾಗ .. ಆ ಕಡೆಯಿಂದ ಪ್ರಿಯ ಮಾತನಾಡಿದಳು "ಇಲ್ಲೂ ಸಹ ಮಳೆ ನಿಲ್ಲುವಂತೆ ಆನಿಸುತ್ತದೆ .. ನಾನು ಎಲ್ಲೂ ಹೋಗೋಲ್ಲಾ .. ನೀನು ಬರೋವರೆಗೂ ಇಲ್ಲೇ ಇರ್ತೀನಿ" ಅಂತಾ ಹೇಳಿದಳು .. ನಾನು ಸಹ "ಹಾ ಸರಿ ಪ್ರಿಯ ಟೆಕ್ ಕೇರ್" ಅಂತಾ ಹೇಳಿ ಫೋನ್ ಇಟ್ಟೆ.. ಸ್ವಲ್ಪ ಹೊತ್ತು ಮೌನವಾಗಿ ಕೂತು ಬಿಟ್ಟೆ ..

                  ಕವನ ಕೇಳಿದಳು "ಅಂಕಲ್ ಯಾರ ಜೊತೆ ನೀವು ಫೋನ್ ಅಲ್ಲಿ ಸ್ವಪ್ನ ಅಕ್ಕ ಅವರ ವಿಚಾರ ಮಾತಾಡಿದ್ದು .. ಪ್ರಿಯ ಅಂದ್ರೆ ಯಾರು ? ಅವರ ಮನೆ ಎಲ್ಲಿದೆ .. ನೀವು ಎಲ್ಲಿಗೆ ಹೋಗಬೇಕು ಈಗ .." ಅಂತೆಲ್ಲಾ ಕೇಳುತ್ತಾ ಸ್ವಲ್ಪ ಬೇಸರ ಆದವಳಂತೆ ಕೂತಳು.. ನಾನು ಅವಳನ್ನು ನೋಡುತ್ತಾ .. "ಯು ಡೋಂಟ್ ವರಿ ಕವನ.. ನಿನ್ನ ಜೊತೆ ಮಾತಾಡಿದ ನಂತರವೇ ನಾನು ಹೋಗೋದು .. ಪ್ರಿಯ ನನ್ನ ಫ್ರೆಂಡ್ .. ಅವಳ ಮನೆ ಇದೇ ಊರಲ್ಲೇ ಇರೋದು.. ಆದರೆ ನಿನ್ನ ಮಾತುಗಳನ್ನು ಕೇಳ್ತೀನಿ . ನೀನು ಇಲ್ಲಿಗೆ ಬಂದಿರೋ ಕೆಲಸ ಮುಗಿಯೋವರೆಗೂ ನಿನ್ನ ಜೊತೆಯಲ್ಲಿಯೇ ಇರ್ತೀನಿ.. ನೀನು ಅದರ ಚಿಂತೆ ಬಿಡು.. ನಿನಗೀಗ ಏನು ಕೆಲಸ ಆಗಬೇಕು ಹೇಳು" ಅಂತಾ ಕೇಳಿದೆ.. ಆಗ ಕವನ ಪುನಃ ತನ್ನ ಮಾತುಗಳನ್ನು ಮುಂದುವರೆಸಿದಳು .. ಈಗ ಅವಳು ಈ ಊರಿಗೆ ಬಂದಿರುವ ಉದ್ದೇಶ ಮತ್ತು ಆಗಬೇಕಿರುವ ಕೆಲವು ಕೆಲಸ ಕಾರ್ಯಗಳ ವಿಚಾರ ಹೇಳಲು ಆರಂಭಿಸಿದಳು ......
(ಮುಂದುವರೆಯುವುದು .... )